ಮಹರ್ಷಿ ವಾಣಿ – ಜೀ಼ ಕನ್ನಡದಲ್ಲಿ ಏಳನೇ ವರ್ಷಗಳ ಮೈಲಿಗಲ್ಲು
ಕನ್ನಡ ಭಕ್ತಿ ಟಿವಿ ಕಾರ್ಯಕ್ರಮಗಳು – ಮಹರ್ಷಿ ವಾಣಿ

ಕನ್ನಡದ ಜನಪ್ರಿಯ ಕಿರುತೆರೆ ವಾಹಿನಿ ಜೀ಼ ಕನ್ನಡದಲ್ಲಿ ಪ್ರತಿನಿತ್ಯ ಪ್ರಸಾರವಾಗುತ್ತಿರುವ “ಮಹರ್ಷಿವಾಣಿ” ಯಶಸ್ವಿ ಏಳನೇ ವರ್ಷಗಳನ್ನು ಪೂರೈಸಿದೆ. ಜನಪ್ರಿಯ ಕಾರ್ಯಕ್ರಮ ಮಹರ್ಷಿವಾಣಿ ಪ್ರತಿನಿತ್ಯ ಬೆಳಿಗ್ಗೆ 8ರಿಂದ9.30ವರೆಗೆ ಪ್ರಸಾರವಾಗುತ್ತಿದೆ. ಜನರ ಧ್ವನಿಯಾಗಿ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಪ್ರತಿಧ್ವನಿಯಾಗಿ ಈ ಕಾರ್ಯಕ್ರಮ ಎಲ್ಲರನ್ನೂ ಗೆದ್ದಿದೆ.
ಈ ಕಾರ್ಯಕ್ರಮದಲ್ಲಿ ದೇಶದ ಮೂಲೆ ಮೂಲೆಗಳಿಂದ ಜನರು ಕೇಳುವ ಪ್ರಶ್ನೆಗಳಿಗೆ ಡಾ.ಮಹರ್ಷಿ ಆನಂದ್ ಗುರೂಜಿ ಅವರು ಉತ್ತರ ನೀಡುತ್ತಾರೆ. ಜೀ಼ ಕನ್ನಡದ ಅಸಂಖ್ಯ ವೀಕ್ಷಕರು ಪ್ರತಿನಿತ್ಯ ಗುರೂಜಿ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿರುತ್ತಾರೆ. ಇಲ್ಲಿಯವರೆಗೆ 25೦೦ಕ್ಕೂ ಹೆಚ್ಚು ಸಂಚಿಕೆಗಳನ್ನು ನಡೆಸಿಕೊಟ್ಟಿರುವ ಡಾ.ಮಹರ್ಷಿ ಆನಂದ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಅಸಂಖ್ಯ ಜನರು ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದಾರೆ. 7೦೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿರುವ ಗುರೂಜಿ ಅವರ ಕುರಿತು ಆರರಿಂದ ಅರವತ್ತರ ಎಲ್ಲರಿಗೂ ಪ್ರೀತಿ.
ಗುರೂಜಿಯವರು ಸಾಮೂಹಿಕ ಯಾಗ , ಪೂಜೆಗಳನ್ನು ಸತತ ಏಳು ವರ್ಷಗಳಿಂದ ನಡೆಸುತ್ತಾ ಬಂದಿದ್ದಾರೆ. ಅದೇ ರೀತಿ ಜನರ ಆರೋಗ್ಯ ಸಮಸ್ಯೆಗಳು ಬೇಗ ನಿವಾರಣೆಯಾಗಲಿ ಪ್ರಸ್ತುತ ಕೋವಿಡ್ ಸಾಂಕ್ರಾಮಿಕ ರೋಗ ನಿವಾರಣೆಯಾಗಲಿ ಜನರ ಬದುಕು ಸಹಜ ಸ್ಥಿತಿಗೆ ಮರಳಲಿ ಎಂಬ ಸದುದ್ದೇಶದಿಂದ ಇದೇ ಜೂನ್ ೨೪ ರ ಗುರುವಾರದಂದು ಗುರೂಜಿ ಯವರ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ಧನ್ವಂತರಿ ಮಹಾಯಾಗ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಡಾ.ಮಹರ್ಷಿ ಆನಂದ್ ಗುರೂಜಿ ಜನರಿಗೆ ಬರೀ ಸಾಂತ್ವನ ಹೇಳುವುದಲ್ಲದೇ ಅವರ ನೋವಿಗೆ ಧ್ವನಿಯಾಗಿದ್ದಾರೆ. ಧಾರ್ಮಿಕ ವಿಚಾರಗಳೇ ಅಲ್ಲದೆ ಕನ್ನಡಪರ ಸಂಘಟನೆಗಳು, ಹೋರಾಟಗಳಲ್ಲಿ ಹಾಗೂ ರೈತ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಆಶಾ ಕಾರ್ಯಕರ್ತೆಯರು ಹಾಗೂ ಮಹಿಳಾ ಸಂಘಟನೆಗಳ ಹೋರಾಟಗಳಲ್ಲೂ ಸಕ್ರಿಯರಾಗಿ ತೊಡಗಿಕೊಳ್ಳುವ ಮೂಲಕ ಜನರ ನೋವಿಗೆ ಸದಾ ಸ್ಪಂದಿಸುವ ಕ್ರಿಯಾಶೀಲರಾಗಿದ್ದಾರೆ. ಪ್ರಸ್ತುತ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಸದಸ್ಯರಾಗಿದ್ದು ದೇವಾಲಯಗಳ ಅಭಿವೃದ್ಧಿಯಲ್ಲೂ ತೊಡಗಿಕೊಂಡಿದ್ದಾರೆ.